ಕೆಪಿಸಿಸಿ ಕಚೇರಿಯಲ್ಲಿ 'ಸಿಎಂ ಸ್ಪಂದನೆ': 'ಕೈ' ಕಾರ್ಯಕರ್ತರ ಅಹವಾಲು ಆಲಿಸಿದ ಸಿದ್ದರಾಮಯ್ಯ ನೂರಾರು ಮಂದಿಯಿಂದ ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಕೆಲವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿ, ಉಳಿದವುಗಳನ್ನು ವಿಭಾಗವಾರು ವಿಂಗಡಿಸಿ ಮರು ಮಂಡನೆ ಮಾಡಬೇಕು. ತ್ವರಿತಗತಿಯಲ್ಲಿ ಇತ್ಯರ್ಥ ಮಾಡಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮಗಳ ಆರೋಪ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಆಹವಾಲು ಆಲಿಸಿದರು.ನೂರಾರು ಮಂದಿಯಿಂದ ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಕೆಲವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿ, ಉಳಿದವುಗಳನ್ನು ವಿಭಾಗವಾರು ವಿಂಗಡಿಸಿ ಮರು ಮಂಡನೆ ಮಾಡಬೇಕು. ತ್ವರಿತಗತಿಯಲ್ಲಿ ಇತ್ಯರ್ಥ ಮಾಡಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜುಲೈ 6 ರಂದು ಇದೇ ರೀತಿಯ ಜನಸಂಪರ್ಕ ಕಾರ್ಯಕ್ರಮ ನಡೆದಿದ್ದು, ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಆದರೆ, ಸಿದ್ದರಾಮಯ್ಯ ಅವರು ಹಿರಿಯ ಐಪಿಎಸ್ ಅಧಿಕಾರಿಗಳ ಸಭೆಗೆ ಹಾಜರಾಗಬೇಕಿದ್ದ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದರು.ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ತೆರಳಿದ್ದ ಶಿವಕುಮಾರ್ ಶನಿವಾರ ಸಿಎಂ ಭೇಟಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.ಮುಖ್ಯಮಂತ್ರಿಗಳ ಬಳಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ವಿವಿಧ ಮಂಡಳಿಗಳು ಮತ್ತು ನಿಗಮಗಳ ಸದಸ್ಯರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿಗಳನ್ನು ಮಾಡಲಾಗುತ್ತದೆ. 10-15 ಮಂಡಳಿಗಳಲ್ಲಿ ಕೆಲವು ಹುದ್ದೆಗಳು ಖಾಲಿ ಇದ್ದು, ನಾನು ಮತ್ತು ಶಿವಕುಮಾರ್ ನೇಮಕ ಮಾಡಿಕೊಳ್ಳುತ್ತೇವೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗಳಿಗೆ ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಲಾಗಿದೆ. ಕೆಲವು ಮಂಡಳಿಗಳಿಗೆ ನಿರ್ದೇಶಕರ ನೇಮಕ ಮಾಡುವಾಗ ಕಾರ್ಯಕರ್ತರನ್ನು ಪರಿಗಣಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.ಧಾರವಾಡದ ಕಾಂಗ್ರೆಸ್ ಕಾರ್ಯಕರ್ತ ಇಸ್ಮಾಯಿಲ್ ಅವರ ದೂರಿನ ಮೇರೆಗೆ ಧಾರವಾಡ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡುವಂತೆ ಸೂಚನೆ ನೀಡಿದರು. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟದ ಕಾಂಗ್ರೆಸ್ ಕಾರ್ಯಕರ್ತರಿಂದಲೂ ಇದೇ ರೀತಿಯ ದೂರುಗಳು ಬಂದವು.ಈ ವೇಳೆ ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಅವರೊಂದಿಗೆ ಮಾತನಾಡಿದ ಸಿಎಂ, ಕೆಪಿಸಿಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಐವರು ಮಹಿಳಾ ಸಿಬ್ಬಂದಿಗೆ ಮನೆ ಮಂಜೂರು ಮಾಡುವಂತೆ ಸೂಚನೆ ನೀಡಿದರು.ಯಾದಗಿರಿ ಜಿಲ್ಲೆಯ ರಾಮಸಮುದ್ರದ ಚಾಂದಪಾಷಾ ಅವರ ಮನವಿಗೆ ಸ್ಪಂದಿಸಿದ ಸಿಎಂ, ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಮನೆ ಮಂಜೂರು ಮಾಡಿಸಿ ಸಿಎಂ ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.ಸಿಎಂ ಪರಿಹಾರ ನಿಧಿಯಿಂದ ಭರವಸೆ ಪತ್ರ ಸಿಕ್ಕರೂ, ಚಿಕಿತ್ಸೆಗೆ 60 ಸಾವಿರ ಹಣ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತ ಶಿವಾನಂದ ದೂರಿದರು. ಇದಕ್ಕೆ ಸ್ಪಂದಿಸಿದ ಸಿಎಂ ತಕ್ಷಣ ಜಾರಿಗೆ ಬರುವಂತೆ ತಮ್ಮ ಅಧಿಕಾರಿ ರಾಮಯ್ಯ ಅವರ ಮೂಲಕ ಅನುದಾನ ನೀಡುವ ಭರವಸೆ ನೀಡಿದರು.ಬಳಿಕ ಸಿದ್ದರಾಮಯ್ಯ ಅವರು ಆದ್ಯತೆ ಮೇರೆಗೆ ವಿಶೇಷಚೇತನರ ಬಳಿ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿದರು. ಅವರಿಗೆ ನಾಲ್ಕು ಚಕ್ರದ ವಾಹನ ಹಾಗೂ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.ವಿಶೇಷ ಸಾಮರ್ಥ್ಯ ಹೊಂದಿರುವ ರಾಜ್ಯಶಾಸ್ತ್ರ ಪದವೀಧರ ಫೈಜ್ ಪಿ ಅಹಮದ್ ಅವರು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಾರ್ ರೂಂನಲ್ಲಿ ಕೆಲಸ ಮಾಡಿದ್ದು, ಈಗ ಸಹಾಯದ ಅಗತ್ಯವಿದೆ ಎಂದು ಹೇಳಿಕೊಂಡಿರು.‘ಯುವನಿಧಿ’ ಯೋಜನೆಯಡಿ ನೋಂದಣಿ ಮಾಡಿಸಿ ಎರಡು ವರ್ಷಗಳ ಕಾಲ ಮಾಸಿಕ 3 ಸಾವಿರ ರೂ.ಗಳನ್ನು ಪಡೆಯುವ ಜೊತೆಗೆ ಕೌಶಲ್ಯ ಹೆಚ್ಚಿಸಿಕೊಳ್ಳಲು ತರಬೇತಿ ನೀಡುವಂತೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.ಕೆಲವು ಮಹಿಳಾ ಕಾರ್ಮಿಕರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಕ್ಕಾಗಿ ಸಿದ್ದರಾಮಯ್ಯ ಅವರನ್ನು "ದೈವಿಕ ವ್ಯಕ್ತಿ" ಎಂದು ಶ್ಲಾಘಿಸಿದರು.ಇದೇ ವೇಳೆ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಸ್.ಶಿವನಾಗಪ್ಪ ಅವರು, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಸ್ವಯಂಚಾಲಿತ ಹಾಲು ಸಂಗ್ರಹಣಾ ವ್ಯವಸ್ಥೆ (ಎಎಂಸಿಎಸ್) ಸಾಫ್ಟ್‌ವೇರ್ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಕನ್ನಡದಲ್ಲಿ ಇಲ್ಲ. ಇದು ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ವೇಳೆ ಮುಖ್ಯಮಂತ್ರಿಗಳು ಕನ್ನಡದಲ್ಲೂ ಲಭ್ಯವಾಗುವಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸ್ಥಳದಲ್ಲೇ 200ಕ್ಕೂ ಹೆಚ್ಚು ಕುಂದುಕೊರತೆಗಳನ್ನು ಪರಿಹರಿಸಿದರು.